ಜಾನಪದ ವಸ್ತು ಸಂಗ್ರಹಾಲಯ ದಕ್ಷಿಣ ಮತ್ತು ಪೂರ್ವೇಷ್ಯಾದಲ್ಲಿಯೇ ಅತಿ ದೊಡ್ಡದಾದ ಮತ್ತು ಸುಸಜ್ಜಿತವಾದುದು. ದೇಜಗೌ ಮತ್ತು ಹಾಮಾನಾರ ದೂರದೃಷ್ಠಿಯ ಫಲವಾಗಿ ಇದು ೧೯೬೮ರಲ್ಲಿ ಸ್ಥಾಪನೆಯಾಯಿತು. ಪ್ರಸ್ತುತ ಇದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ‎ಯ ಅಂಗಸಂಸ್ಥೆಯಾಗಿದ್ದು, ಜಯಲಕ್ಷೀವಿಲಾಸ ಅರಮನೆ, ಮಾನಸಗಂಗೋತ್ರಿ, ಮೈಸೂರಿನಲ್ಲಿದೆ. == ಇತಿವೃತ್ತ == ೧೯೬೪ರಲ್ಲಿ ಹಾಮಾನಾ ಅವರು ಇಂಡಿಯಾನ ವಿಶ್ವವಿದ್ಯಾನಿಲಯದಲ್ಲಿದ್ದಾಗ, ಅಲ್ಲಿಯ ಜಾನಪದ ವಸ್ತು ಸಂಗ್ರಹಾಲಯದಿಂದ ಪ್ರಭಾವಿತರಾಗಿ, ಭಾರತಕ್ಕೆ ಬಂದ ಮೇಲೆ ದೇಜಗೌ ಅವರೊಂದಿಗೆ ಸಮಾಲೋಚಿಸಿ, ಈ ಜಾನಪದ ವಸ್ತು ಸಂಗ್ರಹಾಲಯಕ್ಕೆ ವಸ್ತುಗಳನ್ನು ಸಂಗ್ರಹಿಸಲು ಮುಂದಾದರು. ಆಗ ದೇಜಗೌ ಅವರು ತಮ್ಮ ಮನೆಯಲ್ಲಿ ಇದ್ದ ಒಡವೆ, ವಸ್ತುಗಳನ್ನು ಜಾನಪದ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ಕೊಡುವುದರ ಮೂಲಕ ಇದಕ್ಕೆ ಅಸ್ತಿಭಾರ ಹಾಕಿದರು. ಇವರಲ್ಲದೆ, ನಾಡಿನಾದ್ಯಂತ ಪ್ರಸಿದ್ದರಾಗಿದ್ದ ಡಾ,ಜೀ.ಶಂ.ಪ ಮತ್ತು ಚಿತ್ರಕಲಾವಿದರಾಗಿದ್ದ ಪಿ.ಆರ್.ತಿಪ್ಪೇಸ್ವಾಮಿಯವರ ಪರಿಶ್ರಮವು ಜಾನಪದ ವಸ್ತು ಸಂಗ್ರಹಾಲಯವನ್ನು ಕಟ್ಟುವ ಕೆಲಸದಲ್ಲಿ ನೆರವಾಗಿವೆ. ಇವರು ನಾಡಿನ ಮೂಲೆ ಮೂಲೆಗಳಲ್ಲಿ ಕ್ಷೇತ್ರಕಾರ್ಯ ನಡೆಸಿ, ಮಠ-ಮಾನ್ಯಗಳನ್ನು ಶೋಧಿಸಿ ವಸ್ತುಗಳನ್ನು ಸಂಗ್ರಹಿಸಿದರು. ಪ್ರಸ್ತುತ ಈ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸು.೧೦೦೦ಕ್ಕೂ ಹೆಚ್ಚು ವಸ್ತುಗಳು ಸಂಗ್ರಹಗೊಂಡಿವೆ. ಇಷ್ಟು ದೊಡ್ಡ ಮೊತ್ತದ ವಸ್ತುಗಳು ಬೇರಾವ ಜಾನಪದ ವಸ್ತು ಸಂಗ್ರಹಾಲಯದಲ್ಲೂ ಕಂಡು ಬರುವುದಿಲ್ಲ. == ಸಾಂಸ್ಕೃತಿಕ ಮಹತ್ವ್ತ == ಕರ್ನಾಟಕದ ಸಾಂಸ್ಕೃತಿಕ ಮಹತ್ವ್ತದ ಈ ಜಾನಪದ ವಸ್ತು ಸಂಗ್ರಹಾಲಯ ಪ್ರಮುಖವಾಗಿ ಕರ್ನಾಟಕಕ್ಕೂ ಆ ಮೂಲಕ ಭಾರತದ ಸಂಶೋಧಕರಿಗೂ, ವಿದ್ವಾಂಸರಿಗೂ ಮೂರು ದಶಕಗಳಿಂದಲೂ ಆಶ್ರಯವನ್ನು ನೀಡುತ್ತಾ ಬಂದಿದೆ. ಇದಕ್ಕೆ ನಿದರ್ಶನವಾಗಿ ೧೯೮೫ ಮತ್ತು ೧೯೯೨ರಲ್ಲಿ ಇಂಗ್ಲೆಂಡಿನಲ್ಲಿ ಸಂಸ್ಥೆಯ ಜಾನಪದ ವಸ್ತು ಸಂಗ್ರಹಾಲಯದ ವಸ್ತುಗಳು ಪ್ರದರ್ಶನ ಗೊಂಡಿದ್ದುವು. ಬ್ರಿಟಿಷ್ ಸರ್ಕಾರ ಇದರ ವ್ಯವಸ್ಥೆ ಮಾಡಿತ್ತು. ಈ ವಿಭಾಗದಲ್ಲಿ ಸಾಹಿತಿ ಕೊಠಡಿ ಮತ್ತು ೬೦೦ಕ್ಕೂ ಹೆಚ್ಚು ಕಲಾಕೃತಿಯುಳ್ಳ ಕಲಾಶಾಲೆಯೂ ಇದೆ. ಸಂಗ್ರಹಾಲಯದ ಪ್ರದರ್ಶನ ಕೇಂದ್ರವನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದ್ದು, ಬೊಂಬೆಗಳು, ಜಾನಪದ, ಸಂಗೀತ, ಸಾಹಿತ್ಯ, ಕಲೆ ಮತ್ತು ಜಾನಪದ ಜೀವನ ಇವುಗಳನ್ನು ಕಾಣಬಹುದು. ಸಂಗ್ರಹಾಲಯದ ಬೊಂಬೆಗಳ ವಿಭಾಗದಲ್ಲಿ ತಲೆಭೂತ, ಕೈಭೂತ, ಮಾರಿ, ಸೋಮ ಮತ್ತು ಗಡಿಮಾರಿಗಳಂತಹ ಆಟಗಳಲ್ಲಿ ಉಪಯೋಗಿಸುತ್ತಿದ್ದ ಅನೇಕ ಗಾತ್ರದ ಬೊಂಬೆಗಳನ್ನು ಕಾಣಬಹುದು. ಜಾನಪದ ಜೀವನ ಶೈಲಿಯ ವಿಭಾಗದಲ್ಲಿ ಮೀನುಗಾರರು, ಕುಂಬಾರರು, ಅಂಬಿಗರು, ಕಮ್ಮಾರರು, ರೈತರು, ಚಮ್ಮಾರರು ಬಳಸುತ್ತಿದ್ದ ಸಲಕರಣೆಗಳನ್ನು ಮತ್ತು ಇತರೆ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇವುಗಳ ಜೊತೆಗೆ ಈ ವಿಭಾಗವು ಆಯುಧಗಳು, ದೀಪಗಳು ಅಡುಗೆ ಪಾತ್ರೆಗಳು, ವ್ಯವಸಾಯದ ಬಳಕೆಗಳು, ಚಾವಟಿಗಳು, ಮಡಿಕೆಗಳು, ಮಣಿಗಳು ಮತ್ತು ಬುತ್ತಿಗಳನ್ನು ವಿಶೇಷವಾಗಿ ಹೊಂದಿದೆ. == ನವೀಕರಣ == ಇನ್‍ಫೋಸಿಸ್ ಫೌಂಡೇಷನ್‍ನ ಮುಖ್ಯಸ್ಥರಾದ ಸುಧಾಮೂರ್ತಿಯವರು ೨೦೦೮-೨೦೦೯ರಲ್ಲಿ ಉದಾರ ದೇಣಿಗೆ ನೀಡಿ ಶಿಥಿಲಗೊಂಡಿದ್ದ ಜಯಲಕ್ಷೀವಿಲಾಸ ಕಟ್ಟಡವನ್ನು ನವೀಕರಣಗೊಳಿಸಲು ನೆರವಾದರು. ಅವರ ನರವಿನಿಂದ ಈ ಕಟ್ಟಡದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಪುನಶ್ಚೇತನ ಗೊಂಡಿದೆ. == ನೋಡಿ == ಹವ್ಯಾಸ:ಇವರ ಮನೆಯಲ್ಲಿದೆ ತಲೆಮಾರುಗಳ ಕಥೆ;17 , 2016 2016-12-17 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==